ವಿವಿಧ ಬೇಡಿಕೆ ಈಡೇರಿಸುವಂತೆ ಅಕ್ಷರ ದಾಸೋಹ ನೌಕರರಿಂದ ತಹಶಿಲ್ದಾರರಿಗೆ ಮನವಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ

ರಾಜ್ಯ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಕನಿಷ್ಠ

ವೇತನದಲ್ಲಿ ಹೆಚ್ಚಳ ಸೇರಿದಂತೆ 13 ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿ.26ರಂದು ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಆದ್ಧರಿಂದ ಅಂದಿನಿಂದ ಮುಷ್ಕರ ಮುಗಿಯುವತನ ಯಾವುದೇ ಶಾಲೆಯಲ್ಲಿ ಬಿಸಿಯೂಟ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷೆ ಸುವರ್ಣ ರಾಠೋಡ, ಕಾರ್ಯದರ್ಶಿ ಫಾತಿಮಾ ಹಲಕಾವಟಗಿ, ಖಜಾಂಚಿ ಭೀಮಕ್ಕ ದಾಸರ ತಿಳಿಸಿದ್ದಾರೆ.

ಈ ಕುರಿತು ಇಲ್ಲಿನ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮುಷ್ಕರ ನಡೆಸುವ ಮತ್ತು ಬೇಡಿಕೆಗಳ ವಿವರ ಇರುವ ತಿಳಿವಳಿಕೆ ಪತ್ರದ ಪ್ರತ್ಯೇಕ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 1.18 ಲಕ್ಷ ಮಹಿಳೆಯರು ಮೂಲಸೌಕರ್ಯ, ಕನಿಷ್ಠ ಕೂಲಿ ಇಲ್ಲದೆ 18-19 ವರ್ಷಗಳಿಂದ ಗಾಣದ ಎತ್ತಿನಂತೆ ಈ ಯೋಜನೆಯಲ್ಲಿ ದುಡಿಯುತ್ತಿದ್ದಾರೆ. ಹಿಂದಿನ ಸರ್ಕಾರ ಈ ನೌಕರರ ಬೇಡಿಕೆ ಈಡೇರಿಸುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಬೆಳಿಗ್ಗೆ 9 ರಿಂದ ಮದ್ಯಾಹ್ನ 3ರವರೆಗೆ ನಿತ್ಯ 6 ಗಂಟೆ ಕೆಲಸ ಮಾಡಿದರೂ 4 ಗಂಟೆ ಎಂದು ನಮೂದಿಸಿ ಶೋಷಣೆ ನಡೆಸಲಾಗುತ್ತಿದೆ. ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪೂರ್ವ ಮಾಹಿತಿ ಇಲ್ಲದೆ ಅಲ್ಲಿನ ಶಾಲೆಗಳ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಅಕ್ಷರ ಪಾತ್ರೆಗೆ ವಹಿಸಿಕೊಟ್ಟಿದ್ದಾರೆ. ಸರ್ಕಾರಗಳು ಬಡ ಮಹಿಳೆಯರ ಜೀವದ ಜೊತೆ ಚಲ್ಲಾಟ ಆಡುವ ಕೆಲಸ ಮಾಡುತ್ತಿವೆ. ಮುಷ್ಕರದ ವೇಳೆ ಇವೆಲ್ಲವನ್ನೂ ಪ್ರತಿಭಟಿಸಲಾಗುತ್ತದೆ. ಜೊತೆಗೆ 13 ಬೇಡಿಕೆಗಳ ಈಡೇರಿಕೆಗೂ ಒತ್ತಾಯಿಸಲಾಗುತ್ತದೆ. ಈ ಬಾರಿ ಸರ್ಕಾರ ತೀರ್ಮಾನ ಕೈಕೊಳ್ಳುವವರೆಗೂ ಮುಷ್ಕರ ಕೈಬಿಡದಿರಲು ಸಂಘದ ಕೇಂದ್ರ ಘಟಕ ತೀರ್ಮಾನಿಸಿದೆ ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಲಮಾಣಿ, ಯಲ್ಲವ್ವ ಲಮಾಣಿ, ಅಮೀನಾ ಇಸ್ಲಾಂಪುರ, ಮಲ್ಲಣ್ಣ ಪರಮಣ್ಣವರ್, ರತ್ನಾ ಸಜ್ಜನ, ಜಗದೇವಿ ಹೊಕ್ರಾಣಿ, ಕವಿತಾ ಚವ್ಹಾಣ, ಹಣಮವ್ವ ಬಿಸಲದಿನ್ನಿ, ಗಿರಿಜಾ ಅಂಗಡಿ, ಮಲ್ಲಮ್ಮ ಗುರಡ್ಡಿ, ಶ್ವೇತಾ ಹಂಗರಗಿ, ಉಮಾ ಝಳಕಿ, ಬಸಮ್ಮ ಬೆಲವಂತರಕಂಟಿ, ಜಯಾ ಬಿದರಕುಂದಿ, ಸಿದ್ದಮ್ಮ ಜಲಪುರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ಮನವಿ ಸಲ್ಲಿಸುವಾಗ ಇದ್ದರು.

ವರದಿ:ಸಾಗರ ಉಕ್ಕಲಿ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started