ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸುದ್ದಿ:

ವಿಶ್ವದ ಎಲ್ಲಾ ವಿಜ್ಞಾನಿಗಳಿಂದ ಆದಂತಹ ನೂತನ ಆವಿಷ್ಕಾರಗಳು ಮನುಕುಲದ ಏಳಿಗೆಗಾಗಿ ಹೊರತು ವಿನಾಶಕ್ಕಲ್ಲ.ಆದ್ದರಿಂದ ವಿಜ್ಞಾನಿಗಳ ಸಂಶೋಧನೆ ಮಾನವ ಜನಾಂಗದ ಏಳಿಗೆ ಉಂಟು ಮಾಡುವುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ’ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಯಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ,ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್ ಸ್ಪೈರ್ ಮಾನಕ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ರಾಷ್ಟ್ರದ ಪ್ರಗತಿಯನ್ನು ಅಳೆಯಲು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಪನ ಮಾಡಿದರೆ ತಿಳಿಯಬಹುದು.ಇಂದಿನ ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ಮತ್ತು ಪ್ರಗತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ದೇಶದಲ್ಲಿ ಇಸ್ರೋ ಮಾಡಿರುವ ಸಾಧನೆ ಅಮೋಘವಾದದ್ದು,ಆದರೆ ನಾಸಾಗೆ ಹೋಲಿಸಿದರೆ ನಾವು ಹಿಂದುಳಿದಿದ್ದೇವೆ.ನಮ್ಮ ಇಂದಿನ ಸಾಧನೆಯು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಅಲ್ಲದೇ ಮಾನವ ಸಂಪನ್ಮೂಲವೂ ಸಹ ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾದದ್ದು.ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯ.ಮುಂದುವರಿದ ದೇಶಗಳು ನಮ್ಮ ದೇಶದ ಬುದ್ಧಿವಂತರನ್ನು ಸೆಳೆಯುವ ಕೆಲಸ ಮಾಡುವುದರಿಂದ ಪ್ರತಿಭಾ ಫಲಾಯನವಾಗುತ್ತಿದೆ.ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ ಸಾಧಕರನ್ನು ಆದರ್ಶವಾಗಿಟ್ಟುಕೊಳ್ಳಿ ವಿಜ್ಞಾನವು ಕುತೂಹಲದ ಪರಿಣಾಮ.ವಿಜ್ಞಾನದ ಆವಿಷ್ಕಾರಗಳು ಮನಸ್ಸು ಪ್ರಶಾಂತವಾಗಿದ್ದಾಗ ಮೂಡಿಬಂದ ಅಂಶಗಳು ಎಂದರು.
ಶಾಸಕ ಸುರೇಶ್ ಗೌಡ ಮಾತನಾಡಿ:
ಇಲ್ಲಿ ಭಾಗವಹಿಸಿರುವ ಮಕ್ಕಳು ಮುಂದಿನ ದಿನಗಳಲ್ಲಿ ನಾಡಿಗೆ,ದೇಶಕ್ಕೆ ಕೀರ್ತಿ ತರುವ ವಿಜ್ಞಾನಿಗಳಾಗಿ ಹೊಸ ಸಂಶೋಧನೆಗಳನ್ನು ದೇಶಕ್ಕಾಗಿ ಮೂಡಿಬರಲಿ ಎಂದರು.
ನಂತರ ಮಾತನಾಡಿದ ಡಿ.ಎಸ್.ಇ.ಆರ್.ಟಿ ನಿರ್ದೇಶಕ ಎಂ.ಆರ್.ಮಾರುತಿ:
ಮಕ್ಕಳಲ್ಲಿರುವ ಅನ್ವೇಷಣಾ ಮತ್ತು ಸೃಜನಶೀಲ ಮನೋಭಾವವನ್ನು ಹೊರ ತರುವ ಉದ್ದೇಶದಿಂದ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.ಆದ್ದರಿಂದ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಶಾಲೆ,ಸಮಾಜ ಮತ್ತು ಪೋಷಕರು ಮಾಡಬೇಕು ಎಂದರು.
ಕಾರ್ಯಕ್ರಮಕ್ಕೆ ರಾಜ್ಯದ 740 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು.ಶುಕ್ರವಾರದ ವೇಳೆಗೆ ವಿವಿಧ ಜಿಲ್ಲೆಯ 708 ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅಲ್ಲದೇ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪೋಷಕರು ಸೇರಿದಂತೆ 2000 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು.
ಕಣ್ಮನ ಸೆಳೆದ ವಿದ್ಯಾರ್ಥಿಗಳು ಮಾಡಿದ ಮಾದರಿಗಳು
ಕಾರ್ಯಕ್ರಮದಲ್ಲಿ ರಾಜ್ಯದ 708 ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಮಾದರಿಗಳು ನೆರೆದಿದ್ದ ಜನರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡುವ ಜೊತೆಗೆ ಕಣ್ಮನ ಸೆಳೆದವು.ವಸ್ತು ಪ್ರದರ್ಶನದಲ್ಲಿ ವಿವಿಧ ಅನುಪಯುಕ್ತ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ಬಳಸಿ ಮಾಡಲಾದ ಸರಳೀಕೃತ ಬಣ್ಣ ಹಚ್ಚುವ ಸಾಧನ,ಚಾಲಿ ಅಡಕೆಯ ಸಾವಯವ ಸೊಳ್ಳೆ ಬತ್ತಿ,ಪರಿಸರ ಸ್ನೇಹಿ ಶೌಚಾಲಯ, ವಾಹನ ದಟ್ಟಣೆ ಮತ್ತು ತ್ಯಾಜ್ಯ ನಿರ್ವಹಣೆ ,ಪರಿಸರ ಹವಾನಿಯಂತ್ರಕ,ಸೌರ ಹನಿ ನೀರಾವರಿ ಮುಂತಾದ ಮಾದರಿಗಳು ಪ್ರಮುಖ ಆಕರ್ಷಣೆಯಾಗಿದ್ದವು.
ಇಲಾಖೆ ಉಪನಿರ್ದೇಶಕ ಆರ್.ರಘುನಂದನ್,ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ ಮತ್ತು ಬಿಇಒ ಜಗದೀಶ್ ಉಪಸ್ಥಿತರಿದ್ದರು.
ವರದಿ:ರಾಯಲ್ ಟಿವಿ ನ್ಯೂಸ್ ಜಗದೀಶ್ ನಾಗಮಂಗಲ
Published by Royal TV
Royal tv Kannada news online website channel
View more posts