ಮಾನವತಾವಾದಿ ಭೀಮಪ್ಪನವರ ಪುಣ್ಯಾರಾಧನೆ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಸುದ್ದಿ


ಟಕ್ಕಳಕಿಯಲ್ಲಿ ಸಸಿ ನೆಡುವ ಕಾರ್ಯ

ಮಾನವತಾವಾದಿ ಭೀಮಪ್ಪನವರ 50 ನೇ ಪುಣ್ಯಾರಾಧನೆ:

:

ಮುದ್ದೇಬಿಹಾಳ: ಕೆಲವರು ಸಾಧನೆ ಮಾಡಲೆಂದೇ ನಿರಂತರ ಯತ್ನ ಮಾಡುತ್ತಾರೆ, ಇನ್ನೂ ಕೆಲವರದು ಭಿನ್ನ ಮಾರ್ಗ. ಅವರು ತಮ್ಮ ನಡೆ, ನುಡಿಗಳಿಂದಲೇ ಇತರರಿಗೆ ಆದರ್ಶಪ್ರಾಯರಾಗಿ ಇತಿಹಾಸದಲ್ಲಿ ದಾಖಲಾಗುತ್ತಾರೆ. ಸಾಧಕರ ಸಾಲಿಗೆ ಅರಿವಿಲ್ಲದೇ ಸೇರುತ್ತಾರೆ. ಅಂಥವರ ಸಾಲಿನಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಲಿಂಗೈಕ್ಯ ಭೀಮಪ್ಪ ಬಂಗಾರಿ ಬರುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಪ್ರಚಾರ ಬಯಸದೇ, ಸಮಾಜಕ್ಕೆ, ಮಾನವಕುಲಕ್ಕೆ ಒಳಿತನ್ನು ಮಾಡಿದವರು ಭೀಮಪ್ಪನವರು. ವಿಜಯಪುರ ಜಿಲ್ಲೆಯ ಕಟ್ಟ ಕಡೆಯ ಹಳ್ಳಿ, ಕೃಷ್ಣಾ ನದಿ ತೀರದಲ್ಲಿ ಬರುವ ಟಕ್ಕಳಕಿಯಲ್ಲಿ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಭೀಮಪ್ಪನವರಿಗೆ ಇಬ್ಬರು ಪತ್ನಿಯರು, ಆರು ಗಂಡು, ಐದು ಹೆಣ್ಣು ಮಕ್ಕಳು. ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣದ ಮಹತ್ವ ಅಷ್ಟಾಗಿ ಗೊತ್ತಿಲ್ಲದ ದಿನಗಳಲ್ಲಿ ಅವರು ತಮ್ಮ ಮಕ್ಕಳು ಸೇರಿದಂತೆ ನೆರೆಹೊರೆಯ ಮಕ್ಕಳಿಗೆ ಸಹ ಶಿಕ್ಷಣ ನೀಡಲು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮನೆ ಶಿಕ್ಷಕರನ್ನು ನೇಮಿಸಿ ಶಿಕ್ಷಣ ಜೊತೆಗೆ ಮಾನವೀಯ ಸಂಸ್ಕಾರವನ್ನು ಅವರಿಗೆ ನೀಡಿದರು. ಮಕ್ಕಳು ದೊಡ್ಡವರಾಗಿ ಸಂಸಾರದ ಜವಾಬ್ದಾರಿ ಹೊತ್ತ ನಂತರ ಅವರು ಸಂಸಾರದತ್ತ ಗಮನ ನೀಡದೇ, ಪಾರಮಾರ್ಥ ಜೀವನದ ಕಡೆ ಲಕ್ಷ್ಯ ವಹಿಸಿದರು. ಮಾನ್ವಿಯ ಕಲ್ಮಠ ಸ್ವಾಮೀಜಿಗಳಿಂದ ಗುರು(ಲಿಂಗ) ದೀಕ್ಷೆ ಪಡೆದ ನಂತರ ಸಮಾಜಮುಖಿಯಾಗಿ ಜೀವನಪರ್ಯಂತ ಸೇವೆ ಸಲ್ಲಿಸುತ್ತ ಹೋದರು. ಪಂಚಾಂಗ ಪ್ರವೀಣರಾಗಿದ್ದ ಅವರು ಹೇಳಿದ ವಾಣಿ, ಭವಿಷ್ಯ ನಿಜವಾಗುತ್ತದೆಂದು ನಂಬಿದ್ದ ಗ್ರಾಮೀಣ ಜನತೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳದೇ, ಅವರ ಮದುವೆ, ಮುಂಜುವೆ, ಜನನ, ಮರಣ, ನಾಮಕರಣ ಮೊದಲಾದ ಶುಭ, ಅಶುಭ ಕಾರ್ಯಗಳಿಗೆ ಶುಭ ಹೇಳುತ್ತಲೇ, ಬಸವಣ್ಣ ಹೇಳಿದಂತೆ ಸರ್ವ ಕಾರ್ಯಕ್ಕೂ “ಬಸವಾ, ಬಸವಾ” ಎಂದು ನೀವು ಕೆಲಸ ಆರಂಭಿಸಿ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ಮಾನಸಿಕ ಧೈರ್ಯ ತುಂಬುವ ಕಾರ್ಯ ಮಾಡಿದರು. ಲಿಂಗದೀಕ್ಷೆ ಪಡೆದ ನಂತರ ಗುರುಲಿಂಗ, ಜಂಗಮ ಪ್ರೇಮಿಯಾಗಿ, ಲಿಂಗವಂತ ಧರ್ಮದ ತತ್ವಗಳಾದ ಅಷ್ಟಾವರಣ, ಪಂಚಾಚಾರ, ಷಟಷ್ಥಲ ಆಚರಣೆಗೆ ಮಹತ್ವ ನೀಡಿದರು. ಉಳಿದವರಿಗೆ ಸಹ ಅದನ್ನೇ ಅನುಸರಿಸಲು ಬೋಧಿಸಿದರು. ತಮ್ಮ ಮನೆಯಲ್ಲಿ ಸದಾ ವಿಭೂತಿ, ರುದ್ರಾಕ್ಷಿ, ಲಿಂಗ, ಶಿವದಾರ, ಪೀಠಕ ಸೇರಿದಂತೆ ಇಷ್ಟಲಿಂಗ ಪೂಜೆಗೆ ಬೇಕಾದ ಪರಿಕರಗಳನ್ನು ಉಚಿತವಾಗಿ ಪೂರೈಸಿದರು. ಇಂಥ ನಿಷ್ಕಳಂಕ ಆದರ್ಶ ಜೀವನ ಸಾಗಿಸಿ, ಸರಳತೆಯ ಸಾತ್ವಿಕ ಜೀವನ ಸಾಗಿಸಿದ ತಮ್ಮ ತಂದೆಯವರ ಆಚಾರ, ವಿಚಾರಗಳು ಉಳಿದವರಿಗೆ ಸಹ ಮುಟ್ಟಲಿ ಎನ್ನುವ ಸದುದ್ದೇಶದಿಂದ ಅವರ ಮಕ್ಕಳು, ಬಂಧುಗಳು ನಾಡಿನ ಹಿರಿಯ ಮಠಾಧೀಶರ ಸಾನಿಧ್ಯದಲ್ಲಿ “ಜೀವನ ದರ್ಶನ” ಪ್ರವಚನ ಹಾಗೂ “ಸಂತೃಪ್ತಿ” ಗ್ರಂಥ ಪುಸ್ತಕ (ಡಿ.31 ರಂದು ಬೆಳಿಗ್ಗೆ 10 ಗಂಟೆಗೆ) ಲೋಕಾರ್ಪಣೆ ಮಾಡಲಿದ್ದಾರೆ. ತಮ್ಮ ತಂದೆಯವರ 50 ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಬಂಗಾರಿ ಸಹೋದರರು ಐದು ದಿನಗಳ ಕಾಲ ನಿರಂತರ ಸುತ್ತಮುತ್ತಲಿನ ಗ್ರಾಮಗಳಿಂದ ಭಜನಾ ಮಂಡಳಿಗಳಿಂದ ಭಜನೆ, ಅನ್ನದಾಸೋಹ, ಟಕ್ಕಳಕಿ ಹಾಗೂ ಇಂಗಳಗಿ ಗ್ರಾಮಗಳಲ್ಲಿ 50 ಗಿಡಗಳನ್ನು ನೆಡುವ ಕಾರ್ಯ, ಜಂಗಮ ದಾಸೋಹ, ನಿವೃತ್ತ ಸೈನಿಕರ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯ ಹಮ್ಮಿಕೊಂಡಿದ್ದಾರೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started