ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತ್ರುತ್ವದ ನಿಯೋಗ ಗುರುವಾರ ದಿನಾಂಕ 20 ಫೆಬ್ರವರಿ 2020 ರಂದು, ಬೆಂಗಳೂರಿನ ಢವಳಗಿರಿ ನಿವಾಸದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ ಸಮಾಜದವತಿಯಿಂದ ಮನವಿ ಪತ್ರ ಸಲ್ಲಿಸಿದರು.
1) ಕೃಷಿ ಆಧಾರಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜವನ್ನು ಕೇಂದ್ರ
ಸರ್ಕಾರದ ಒಬಿಸಿ ಮೀಸಲಾತಿ ಸೇರ್ಪಡಿಸುವಂತೆ
2) ಪಂಚಮಸಾಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ
3)ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯ
4) ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಮೋಹನ್ ಲಿಂಬಿಕಾಯಿಯವರಿಗೆ ಧಾರವಾಡ ಹುಬ್ಬಳ್ಳಿ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯ
ಈ ಸಂದರ್ಭದಲ್ಲಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ಯಮಿ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣ ರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ , ಡಾ. ಬಿ. ಎಸ್. ಪಾಟೀಲ ನಾಗರಾಳ ಹುಲಿ ಹಾಗೂ ಶಿಕ್ಷಕರ ಸಂಘಟನೆಯ ನಿರಂಜನಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಅದು ತಪ್ಪಲ್ಲ .ಆದರೆ ನಮ್ಮ ಕನ್ನಡ ಭಾಷೆಯನ್ನು ಮರೆಯದೇ ಇತರೆ ಭಾಷೆಗಳಿಂದ ಜ್ಞಾನ ಪಡೆದುಕೊಳ್ಳಿ ಎಂದು ಗ್ರಾ.ಪಂ .ಅದ್ಯಕ್ಷ ಬಸವರಾಜ ಹೇಳಿದರು.
ದೇವಲಾಪುರದ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಯಲ್ಲಿ ಅಂಕಗಳಿಸುವುದೆ ಅಂತಿಮ ಗುರಿಯಾಗಿಸಿಕೊಂಡರೆ ಮಗುವಿನ ವ್ಯಕ್ತಿತ್ವವನ್ನು ನಿರ್ಲಕ್ಷಿಸಿ ದಂತೆ ಆಗುತ್ತದೆ.ಪೋಷಕರು ಶಾಲೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ.ಮಕ್ಕಳನ್ನು ಬೆಳಸಿ ಸಮಾಜಕ್ಕೆ ಕೊಡುಗೆ ಕೊಟ್ಟ ನಂತರ ಅವರು ಸಮಾಜಕ್ಕೆ ಪರಿಮಳವನ್ನು ಪಸರಿಸುವಂತೆ ಮಾಡುವ ಪುಷ್ಪಗಳಾಗಬೇಕು.ಅಲ್ಲದೇ ಪೋಷಕರು ಮಕ್ಕಳ ಮನಸ್ಸನ್ನು ಅರಿಯದೇ ಒತ್ತಡ ಹೇರುವುದು ಮಗುವಿನ ಎಳೆಯ ಮನಸ್ಸನ್ನು ಚುಚ್ಚಿಕೊಲ್ಲುತ್ತದೆ.ಅವರು ನಮ್ಮ ಮಾತನ್ನು ಕೆಳದಿರಬಹುದು.ಆದರೆ ಮಕ್ಕಳು ನಮ್ಮ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಹೇಳಿದರು.
ಮಕ್ಕಳು ಸಂಕುಚಿತ ಮನೋಭಾವನೆಯನ್ನು ದೂರ ಮಾಡುವ ಮೂಲಕ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ಸಹ ವಿಶೇಷವಾದದ್ದು,ಅಂತಹ ವಿಶೇಷ ಹಾದಿಯಲ್ಲಿ ಮಕ್ಕಳು ಸಾಗುವಾಗ ನೀವು ಉತ್ತಮ ರೀತಿಯಲ್ಲಿ ಬೆಳೆಸುವ ಕೆಲಸವನ್ನು ತಂದೆ ತಾಯಿ ಮಾಡಬೇಕು.ನಮ್ಮ ಮಕ್ಕಳಿಗೆ ಜ್ಞಾನ ಕೊಡುವ ಶಿಕ್ಷಕರನ್ನು ದೇವರು ಎಂದು ಭಾವಿಸಿ.ಏಕೆಂದರೆ ನೀವು ಕೊಡುವುದು ಅನ್ನ,ಆದರೆ ಶಿಕ್ಷಕರು ಕೊಡುವುದು ಜ್ಞಾನವಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಅಂಬೇಡ್ಕರ್ ವಸತಿ ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ತಿಳಿಸಿದರು.
ಮಕ್ಕಳ ಉತ್ಸಾಹ ಕಲಿಕೆಯ ನಿರಂತರ ಸಾಕ್ಷಿಗೆ ಇಂತಹ ಕಾರ್ಯಕ್ರಮಗಳಿಂದ ಸರಕಾರಿ ಶಾಲೆಗಳ ಬೆಳವಣಿಗೆ ಸಾದ್ಯವೆಂದು ಶಿಕ್ಷಣ ಸಂಯೋಜಕರಾದ ಡಿ ಪಿ.ಗಿರೀಶ್ ಅಬಿಪ್ರಾಯಪಟ್ಟರು
ಶಾಲಾ ಆಡಳಿತ ಮಂಡಳಿಯ ಅದ್ಯಕ್ಷರಾದ ತಿಮ್ಮೆಗೌಡ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು ಗ್ರಾ .ಪಂ .ಸದಸ್ಯರಾದ ಡಿಕೆ ಸುರೇಶ್ ಪಶು ವೈದ್ಯಾಧಿಕಾರಿಗಳಾದ ಹರೀಶ್ ಸಿ ಆರ್ ಪಿ ವನಾಜಾಕ್ಷಿ ಗಣ್ಯರು.ಪೋಷಕರು ಹಾಜರಿದ್ದರು .
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಂಜಮಣಿ,ಪತ್ರಕರ್ತ ಜಗದೀಶ, ಪ್ರೌಢ ಶಾಲಾ ವಿಭಾಗದ ಶಿಕ್ಷಕರಾದ ಅಯ್ಯಪ್ಪ,ವಸತಿ ಶಾಲೆಯ ಶಿಕ್ಷಕರು.ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು ಶಾಲಾ ಶಿಕ್ಷಕರಾದ ನಾಗೇಗೌಡ ಸ್ವಾಗತಿಸಿದರು ಶಿಕ್ಷಕರಾದ ಪರಮೇಶ್ ವಂದಿಸಿದರು.
ವಿಶ್ವದ ಎಲ್ಲಾ ವಿಜ್ಞಾನಿಗಳಿಂದ ಆದಂತಹ ನೂತನ ಆವಿಷ್ಕಾರಗಳು ಮನುಕುಲದ ಏಳಿಗೆಗಾಗಿ ಹೊರತು ವಿನಾಶಕ್ಕಲ್ಲ.ಆದ್ದರಿಂದ ವಿಜ್ಞಾನಿಗಳ ಸಂಶೋಧನೆ ಮಾನವ ಜನಾಂಗದ ಏಳಿಗೆ ಉಂಟು ಮಾಡುವುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ’ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಯಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ,ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್ ಸ್ಪೈರ್ ಮಾನಕ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ರಾಷ್ಟ್ರದ ಪ್ರಗತಿಯನ್ನು ಅಳೆಯಲು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಪನ ಮಾಡಿದರೆ ತಿಳಿಯಬಹುದು.ಇಂದಿನ ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ಮತ್ತು ಪ್ರಗತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ದೇಶದಲ್ಲಿ ಇಸ್ರೋ ಮಾಡಿರುವ ಸಾಧನೆ ಅಮೋಘವಾದದ್ದು,ಆದರೆ ನಾಸಾಗೆ ಹೋಲಿಸಿದರೆ ನಾವು ಹಿಂದುಳಿದಿದ್ದೇವೆ.ನಮ್ಮ ಇಂದಿನ ಸಾಧನೆಯು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಅಲ್ಲದೇ ಮಾನವ ಸಂಪನ್ಮೂಲವೂ ಸಹ ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾದದ್ದು.ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯ.ಮುಂದುವರಿದ ದೇಶಗಳು ನಮ್ಮ ದೇಶದ ಬುದ್ಧಿವಂತರನ್ನು ಸೆಳೆಯುವ ಕೆಲಸ ಮಾಡುವುದರಿಂದ ಪ್ರತಿಭಾ ಫಲಾಯನವಾಗುತ್ತಿದೆ.ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ ಸಾಧಕರನ್ನು ಆದರ್ಶವಾಗಿಟ್ಟುಕೊಳ್ಳಿ ವಿಜ್ಞಾನವು ಕುತೂಹಲದ ಪರಿಣಾಮ.ವಿಜ್ಞಾನದ ಆವಿಷ್ಕಾರಗಳು ಮನಸ್ಸು ಪ್ರಶಾಂತವಾಗಿದ್ದಾಗ ಮೂಡಿಬಂದ ಅಂಶಗಳು ಎಂದರು.
ಶಾಸಕ ಸುರೇಶ್ ಗೌಡ ಮಾತನಾಡಿ:
ಇಲ್ಲಿ ಭಾಗವಹಿಸಿರುವ ಮಕ್ಕಳು ಮುಂದಿನ ದಿನಗಳಲ್ಲಿ ನಾಡಿಗೆ,ದೇಶಕ್ಕೆ ಕೀರ್ತಿ ತರುವ ವಿಜ್ಞಾನಿಗಳಾಗಿ ಹೊಸ ಸಂಶೋಧನೆಗಳನ್ನು ದೇಶಕ್ಕಾಗಿ ಮೂಡಿಬರಲಿ ಎಂದರು.
ನಂತರ ಮಾತನಾಡಿದ ಡಿ.ಎಸ್.ಇ.ಆರ್.ಟಿ ನಿರ್ದೇಶಕ ಎಂ.ಆರ್.ಮಾರುತಿ:
ಮಕ್ಕಳಲ್ಲಿರುವ ಅನ್ವೇಷಣಾ ಮತ್ತು ಸೃಜನಶೀಲ ಮನೋಭಾವವನ್ನು ಹೊರ ತರುವ ಉದ್ದೇಶದಿಂದ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.ಆದ್ದರಿಂದ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಶಾಲೆ,ಸಮಾಜ ಮತ್ತು ಪೋಷಕರು ಮಾಡಬೇಕು ಎಂದರು.
ಕಾರ್ಯಕ್ರಮಕ್ಕೆ ರಾಜ್ಯದ 740 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು.ಶುಕ್ರವಾರದ ವೇಳೆಗೆ ವಿವಿಧ ಜಿಲ್ಲೆಯ 708 ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅಲ್ಲದೇ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪೋಷಕರು ಸೇರಿದಂತೆ 2000 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು.
ಕಣ್ಮನ ಸೆಳೆದ ವಿದ್ಯಾರ್ಥಿಗಳು ಮಾಡಿದ ಮಾದರಿಗಳು
ಕಾರ್ಯಕ್ರಮದಲ್ಲಿ ರಾಜ್ಯದ 708 ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಮಾದರಿಗಳು ನೆರೆದಿದ್ದ ಜನರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡುವ ಜೊತೆಗೆ ಕಣ್ಮನ ಸೆಳೆದವು.ವಸ್ತು ಪ್ರದರ್ಶನದಲ್ಲಿ ವಿವಿಧ ಅನುಪಯುಕ್ತ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ಬಳಸಿ ಮಾಡಲಾದ ಸರಳೀಕೃತ ಬಣ್ಣ ಹಚ್ಚುವ ಸಾಧನ,ಚಾಲಿ ಅಡಕೆಯ ಸಾವಯವ ಸೊಳ್ಳೆ ಬತ್ತಿ,ಪರಿಸರ ಸ್ನೇಹಿ ಶೌಚಾಲಯ, ವಾಹನ ದಟ್ಟಣೆ ಮತ್ತು ತ್ಯಾಜ್ಯ ನಿರ್ವಹಣೆ ,ಪರಿಸರ ಹವಾನಿಯಂತ್ರಕ,ಸೌರ ಹನಿ ನೀರಾವರಿ ಮುಂತಾದ ಮಾದರಿಗಳು ಪ್ರಮುಖ ಆಕರ್ಷಣೆಯಾಗಿದ್ದವು.
ಇಲಾಖೆ ಉಪನಿರ್ದೇಶಕ ಆರ್.ರಘುನಂದನ್,ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ ಮತ್ತು ಬಿಇಒ ಜಗದೀಶ್ ಉಪಸ್ಥಿತರಿದ್ದರು.
ಬೆಳಿಗ್ಗೆ 8:00 25 ನಿಮಿಷಕ್ಕೆ ನಕ್ಷತ್ರ ಲೋಕಕ್ಕೆ ಪಯಣ ಬೆಳೆಸಿದ ವಾಕ್ ಸಿದ್ಧಿ ಮಾನವ 105 ವರ್ಷವಾಗಿದ್ದ ಮರುಳಾರಾಧ್ಯ ಶ್ರೀ ಐಕ್ಯರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಹಿರೇಮಠದ ನಡೆದಾಡುವ ದೇವರು ಎಂದೆ ಪ್ರಸಿದ್ಧರಾದ ಶ್ರೀ ಮರುಳಾರಾಧ್ಯ ಶ್ರೀಗಳು ಇಂದು ಬೆಳಗಿನ ಜಾವ 8:00 ಗಂಟೆ 25 ನಿಮಿಷಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮುಂದಿನ ಕಾರ್ಯದ ಸಿದ್ಧತೆ ಶ್ರೀ ಮಠದಲ್ಲಿ ನಡೆದಿವೆ.
ಅಂತಿಮದರ್ಶನಕ್ಕೆ ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಸ್ಥಿತಿ ಚಿಂತಾಜನಕ ಆದಾಗಿನ ಪರಿಸ್ಥಿತಿಯಿಂದ ಸಿಂದಗಿಯ ಸಾರಂಗ ಮಠದ ಶ್ರೀಗಳಾದ ಪ್ರಭು ಸಾರಂಗದೇವ ಶಿವಾಚಾರ್ಯರು ಹಿರೇಮಠದ ಭಕ್ತವೃಂದದ ಜೊತೆಗಿದ್ದು ಮುಂದಿನ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇದ್ರ ಹೆಗ್ಗಡೆ ಅವರ ಸದಿಚ್ಚೆಯ ಮೇರೆಗೆ ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಡಸ್ಟಬಿನ್ಗಳನ್ನು ವಿತರಿಸುವ ಮೂಲಕ ನಮ್ಮೂರು, ನಮ್ಮ ಶ್ರದ್ಧಾಕೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವ್ಯವಸ್ಥಾಪಕ ಹೊನ್ನಪ್ಪ ತಿಳಿಸಿದ್ದಾರೆ.
ಪ್ರತಿಯೊಂದು ಊರಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಹಸಿರು ಮತ್ತು ನೀಲಿ ಬಣ್ಣದ ತಲಾ ಒಂದು ಡಸ್ಟಬಿನ್ ವಿತರಿಸಲಾಗಿದೆ. ಹಸಿರು ಡಸ್ಟಬಿನ್ನಲ್ಲಿ ಹಸಿ ಕಸ, ನೀಲಿ ಡಸ್ಟಬಿನ್ನಲ್ಲಿ ಒಣ ಕಸ ಹಾಕುವಂತೆ ಶ್ರದ್ಧಾಕೇಂದ್ರಗಳ ಕಸ ವಿಲೇವಾರಿ ಮಾಡುವವರಿಗೆ ತಿಳಿವಳಿಕೆ ನೀಡಲಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಯ ಮಹತ್ವ ಕುರಿತು ಈಗಾಗಲೇ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು. ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಆಯಾ ಭಾಗದ ಮೇಲ್ವಿಚಾರಕರು, ಸಹವರ್ತಿಗಳು, ಸ್ಥಳೀಯ ಸಂಘದ ಸದಸ್ಯರು, ಶ್ರದ್ಧಾಕೇಂದ್ರದ ಪ್ರಮುಖರು ಪಾಲ್ಗೊಂಡಿದ್ದರು.
ಡಾ.ವೀರೇಂದ್ರ ಹೆಗ್ಗಡೆಯವರ ಅಪ್ಪಣೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರದ್ದಾ ಕೇಂದ್ರಗಳಿಗೆ 2 ಕಸದ ಬುಟ್ಟಿ ಗಳನ್ನು ನೀಡಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಮಹಾಂತೇಶ ನಗರದಲ್ಲಿನ ಮಹಾಗಣಪತಿ ದೇವಸ್ಥಾನಕ್ಕೆ ಸಂಘದ ಮೇಲ್ವಿಚಾರಕಿಯಾದ ಶ್ರೀಮತಿ ಕವಿತಾ ಹಾಗೂ ಸಂಘದ SP ಅವರಾದ ಕುಮಾರಿ ಸಾವಿತ್ರಿ ಮತ್ತು ಸದಸ್ಯರುಗಳು.ಇಂದು ಎರಡು ಕಸದ ಬುಟ್ಟಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಲಿತ ಓಡಿಸಮಠ, ಶಶಿಕಲಾ ಪೂಜಾರಿ,ಶಾರದಾ ಪವಾರ,ಆಶಾ ಪಾಟೀಲ,ಶಾಂಭವಿ ಪಾಟೀಲ, ಮಮತಾ,ಗಿರಿಜಾದೇವಿ,ಜಯಶ್ರೀ, ಮಹಾದೇವಿ, ದೇವಸ್ಥಾನ ಕಮಿಟಿಯವರಾದ ಪಾಂಡುರಂಗ ಪದಕಿ, ಆನಂದ ಕಾಮಟೆ ,ಗಜಾನನ ನಲವಡೆ, ಮುತ್ತು ರಾಯಗೊಂಡ, ರಾಜಶೇಖರ ಮ್ಯಾಗೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಇರುವ ಆರ್ ಎಮ್ ಎಸ್ ಎ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡ ಚಿನ್ನರ ಕನ್ನಡ ಭಾಷಾ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.
ಪ್ರಾಸ್ತಾವಿಕವಾಗಿ ಕಾರ್ಯಕ್ರಮದಲ್ಲಿ ಚಿನ್ನರ ಭಾಷೆಯ ಕುರಿತು ಇಂದಿನ ದಿನಗಳಲ್ಲಿ ಎಷ್ಟೊಂದು ಮುಖ್ಯವಾಗಿದೆ, ಎಂಬುದನ್ನು ಶಿಕ್ಷಕರಾದ ಈರಯ್ಯ ಮಠ ಮಾತನಾಡಿದರು.
ಇನ್ನೂ ಭಾಷೆಯ ಕುರಿತು ಕನ್ನಡ ವಚನಗಳಲ್ಲಿ ಬರುವ ತಾತ್ಪರ್ಯವನ್ನು ಆದರ್ಶ ವಿಧ್ಯಾಲಯದ ಮಕ್ಕಳು ಒಬ್ಬೊಬ್ಬರಾಗಿ ವಿಸ್ತರಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ವಿಧ್ಯಾಲಯದ ಶಿಕ್ಷಕ ಶಿಕ್ಷಕಿಯರು ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ಅವರನ್ನು ಎಲ್ಲರೂ ಕೂಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಅತಿಥಿಗಳಾಗಿದ್ದ ಅಶೋಕ ಹಂಚಲಿ ಅವರು ಮಾತನಾಡಿದರು:
ವಚನ ಸಾಹಿತ್ಯಕ್ಕೆ ಜೀವ ತುಂಬಿದ ಕೆಲಸ ಮಾಡುತ್ತಿದ್ದ ಈ ವಿಧ್ಯಾಲಯದ ಮಕ್ಕಳಿಗೆ ಹಾಗೂ ಅವರನ್ನು ಮಾರ್ಗದರ್ಶನ ನೀಡಿದವರಿಗೆ ಅಭಿನಂದನೆ,ವಚನಗಳು ವ್ಯಕ್ತಿತ್ವ ವಿಕಸನದ ಮೆಟ್ಟಿಲುಗಳು ಆಗುತ್ತವೆ.
ಕಾಯಕ ಜೀವಿಗಳು ನಾಯಕ ಜೀವಿಗಳಾಗುತ್ತವೆ.ವಚನಗಳು ಗೊತ್ತಿಲ್ಲದ ಸಮಯದಲ್ಲಿ ವಚನ ಗುರುತಿಸುವ ಕೆಲಸ ಅಂದಿನ ವಚನಕಾರರು ಮಾಡಿದ್ದಾರೆ.ಕಾರಣ ಇಂದಿಗೂ ವಚನಗಳು ಜೀವಂತವಾಗಿವೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ವಚನ ಸಾಹಿತ್ಯದಲ್ಲಿ ಇಷ್ಟೋಂದು ತಿಳುವಳಿಕೆ ಮಾಡಿಕೊಂಡು ಈ ರೀತಿಯಲ್ಲಿ ಮುಂದು ವರೆದಿದ್ದು ನನಗೆ ತುಂಬ ಹರ್ಷ ವೆನಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಶ್ರೀಮತಿ ಎಮ್ ಡಿ ತೆಗ್ಗಿನಮಠ ವಹಿಸಿದ್ದರು,ಎಸ್ ಚಿಲ್ಲಾಳಶೆಟ್ಟರ,ಶ್ರೀಮತಿ ಎಸ್ ಎಸ್ ಬಿರಾದಾರ, ಕವಡಿಮಟ್ಟಿ ಶಿಕ್ಷಕರು,ಟಿ ಎನ್ ರೂಡಗಿ,ಸವಿತಾ ವಿ,ಲಕ್ಷ್ಮಣ ಲಮಾಣಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಎಸ್ ಎಸ್ ಸಜ್ಜನ,ವಂದನಾರ್ಪನೆ ಹಂಚಲಿ ಶಿಕ್ಷಕರು ಮಾಡಿದರು.
ಗೊಳಸಂಗಿ ಕ್ರಾಸ್ ಹತ್ತಿರ ಭೀಕರ ಅಪಘಾತ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೆ ಮೂರು ಸಾವು ಇಬ್ಬರ ಸ್ಥಿತಿ ಚಿಂತಾಜನಕ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಇನ್ನೊಂದು ಸಾವು.ಮೃತರು ಆಂದ್ರ ಪ್ರದೇಶದವರು ಎಂದು ತಿಳಿದು ಬಂದಿದೆ. ಇನ್ನೂ ಅಪಘಾತ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಾರಣ ಆಲಮಟ್ಟಿ, ನಿಡಗುಂದಿ, ಬಾಗೇವಾಡಿ,ಕೂಡಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆಯ ಮೇಲೆ ಇದ್ದ ಟ್ರಾಫಿಕ್ ನಿಯಂತ್ರಣ ಮಾಡಿದರು.
ಘಟನೆ ವಿವರ:ವಿಜಯಪುರ ಕಡೆಯಿಂದ ಬರುತ್ತಿದ್ದ ಮಾರುತಿ ಸುಜುಕಿ KA-34 P 0880 ನಂಬರಿನ ಕಾರು ವಿಜಯಪುರ ಕಡೆ ಹೊರಟಿದ್ದ GJ-03-BV-3777 ನಂಬರಿನ ಲಾರಿ ರಸ್ತೆ ರಿಪೇರಿಗಾಗಿ ಬ್ಯಾರಿಕೆಡ್ ಹಾಕಿದ್ದರಿಂದ ಒಂದೇ ಬದಿಯಲ್ಲಿ
ಚಲಿಸಬೇಕಾಗಿತ್ತು,ಆದರೆ ಕಾರು ಹಾಗೂ ಲಾರಿ ವೇಗವಾಗಿ ಇದ್ದ ಕಾರಣ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.ಈ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಅಡಿಶನಲ್ ಎಸ್ಪಿ ಅರಸಿದ್ದಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ. ಕೂಡಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಮಾನ್ಯ ಮುಖ್ಯಮಂತ್ರಿಗಳೇ, ಯಾವ ಶಾಸಕರಿಗೂ ಇಲ್ಲದ ಮಾನದಂಡ ಮಾನ್ಯ ಶ್ರೀ . ಮಹೇಶ್ ಕುಮಟಳ್ಳಿ ರವರಿಗೆ ಏಕೆ , ತಾವು ಅಧಿಕಾರಕ್ಕೆ ಬರಲು ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ತಮ್ಮ ಮಾತೃ ಪಕ್ಷದ ಆರೋಪಗಳನ್ನು ಸಹಿಸಿಕೊಂಡು ತಮ್ಮನ್ನು ತೊಡಗಿಸಿಕೊಂಡಿರುವಂತಹ ಒಬ್ಬ ನಿಷ್ಠಾವಂತ ದೀಮಂತ ನಾಯಕರನ್ನು ತಮ್ಮ ಸಚಿವ ಸಂಪುಟದಿಂದ ಹೊರಗಿಟ್ಟ ಮರ್ಮವೇನೂ.
ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಪೊಡುವುದಾಗಿ ತಾವೇ ಈ ಹಿಂದೆ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದು ಆದರೆ ತಾವು ತಮ್ಮ ನಿರ್ಧಾರವನ್ನು ಬದಲಾಯಿಸಿದ ಹಿಂದಿನ ಶಕ್ತಿಯಾವುದು . ಮುಖ್ಯಮಂತ್ರಿಗಳೇ ನಮ್ಮ ಸಮಾಜವನ್ನು ಇಷ್ಟೊಂದು ನಿಕೃಷ್ಟತೆಯಿಂದ ಕಾಣಬೇಡಿ . ನಮ್ಮ ಪಂಚಸಾಲಿ ಸಮಾಜದಲ್ಲಿಯು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಏರುವಂತಹ ಅರ್ಹ ನಾಯಕರಿದ್ದಾರೆ . ಆದರೆ ಲಿಂಗಾಯಿತ ಸಮಾಜದಲ್ಲಿ ಬೃಹತ್ ಆಕಾರವಾಗಿ ಬೆಳೆದ ತಮ್ಮನ್ನು ಹಿಂದಿಕ್ಕಬಾರದೆಂಬ ಉದ್ದೇಶದಿಂದ ನಾವುಗಳು ತಮ್ಮ ಕೈಬಲ ಪಡಿಸಲು ಸಹಕರಿಸಿದ್ದು , ಆದರೆ ತಾವುಗಳು ನಮ್ಮ ನಾಯಕರು ಬೆಳಕಿಗೆ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದೀರಿ ಇದೇ ಪ್ರವೃತ್ತಿ ಮುಂದುವರೆದಲ್ಲಿ ಹಿಂದಿನ ಎಲ್ಲಾ ಕಟ್ಟುಪಾಡುಗಳನ್ನು ಮುರಿದು ನಮ್ಮ ಸಮಾಜದ ಶಕ್ತಿಯನ್ನು ತಮಗೆ ತೋರಿಸಲು ಸಹ ಯೋಚಿಸುವುದಿಲ್ಲ . ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂಬ ಮಾತು ಸುಳ್ಳಾಗದಂತೆ ತಾವು ನಡೆದುಕೊಳ್ಳಬೇಕು ಶ್ರೀ . ಮಹೇಶ್ ಕುಮಟಳ್ಳಿರವರಿಗೆ ಸಚಿವ ಸ್ಥಾನ ನೀಡುವುದರೊಂದಿಗೆ ಇನ್ನೆರಡು ಸಚಿವ ಸ್ಥಾನವನ್ನು ಸಮಾಜಕ್ಕೆ ನೀಡಿ ಪಂಚಮಸಾಲಿ ಸಮಾಜ ತಮ್ಮ ಮೇಲೆ ಇರಿಸಿದಂತಹ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .